ಉಚಿತ ಆರೋಗ್ಯ ಮೇಳಗಳ ಸದುಪಯೋಗಕ್ಕೆ
ಅಬಕಾರಿ ಸಚಿವ ಕೆ.ಗೋಪಾಲಯ್ಯ ಕರೆ

ಬೆಂಗಳೂರು;;ಉಚಿತ ಆರೋಗ್ಯ ತಪಾಸಣಾ ಶಿಬಿರಗಳ‌‌ ಉಪಯೋಗವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದರು.

ಮಹಾಲಕ್ಷ್ಮಿ ಲೇ‌ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಕೃಷ್ಣ ನಗರದ ಪ್ರಸನ್ನ ಗಣಪತಿ ಟ್ರಸ್ಟ್ ನಲ್ಲಿಂದು ಮಹಾಲಕ್ಷ್ಮಿ ಎಜುಕೇಷನ್‌ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ‌ ಅವರು ಮಾತನಾಡಿದರು.

ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ.‌ನೀವಷ್ಟೇ ಅಲ್ಲದೆ ದೂರದ ಊರಿನಲ್ಲಿರುವ ನಿಮ್ಮ ಬಂಧುಗಳು, ಸ್ನೇಹಿತರು, ಹಿತೈಷಿಗಳಿಗೂ ಇಂಥಹ ಶಿಬಿರಗಳ ಬಗ್ಗೆ ತಿಳಿಸಿ ಅವರು ಕೂಡ ಇದರ ಉಪಯೋಗಪಡೆಯಲು ಸಹಕಾರ ನೀಡಿ ಎಂದರು.

ಕಣ್ಣು, ಹೃದಯ, ಶ್ವಾಸಕೋಶ, ಗರ್ಭಕೋಶ, ರಕ್ತದೊತ್ತಡ, ಸಕ್ಕರೆ ಖಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ನೀಡಲಾಗುತ್ತಿದೆ. ಕಣ್ಣಿನ ತೊಂದರೆ ಇರುವವರಿಗೆ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಗಳನ್ನೂ ಕೂಡ ನೀಡಲಾಗುವುದು ಎಂದರು.

ಕ್ಷೇತ್ರದ ಜನರ ಉತ್ತಮ ಆರೋಗ್ಯಕ್ಕಾಗಿ ಪ್ರತಿ ತಿಂಗಳು ಕ್ಷೇತ್ರದ ಹಲವೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಔಷಧಿಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಇತರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ಉಪಯೋಗಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ,ವಾರ್ಡ್ ಅಧ್ಯಕ್ಷ ಲೋಕೇಶ್, ಶಿವಾನಂದ ಮೂರ್ತಿ, ವೆಂಕಟೇಶ್, ವೆಂಕಟೇಶಮೂರ್ತಿ, ಹನುಮಂತರಾಜು, ಅಂಬರೀಶ್,ಸುರಭಿ ನಾಗರಾಜ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


.

Related Posts